ಪೋಸ್ಟ್‌ಗಳು

ಅಕ್ಟೋಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅನನ್ಯ ದೀಪಾವಳಿ

  ಅನನ್ಯ ದೀಪಾವಳಿ ನಮ್ಮ ಕಡೆ ದೀಪಾವಳಿಗಿಂತ ದೊಡ್ಡ ಹಬ್ಬ ಬೇರೊಂದಿಲ್ಲ. ಕತ್ತಲ ರಾತ್ರಿ ನರಕಚತುರ್ದಶಿಯ ಮುಂಚಿನ ದಿನ. ಅವತ್ತು ಬೆಳಗಿನಂತೆ ಸಂಭ್ರಮ. ಮನೆಯ ಹೊಸ್ತಿಲಿನಿಂದ ಹಿತ್ತಲವರೆಗೆ ಕೆಮ್ಮಣ್ಣು ಹಚ್ಚಿ ಶೇಡಿ ಬಿಡಿಸುವ ಸಂಭ್ರಮ. ಆಯುಧ ಪೂಜೆಗೆ ಕೃಷಿ ಹಾಗೂ ಪಾಕಶಾಲೆಯ ಹತ್ಯಾರಗಳನ್ನು ಸ್ವಚ್ಛ ಮಾಡುವುದಿದ್ದರೆ ಮಾಡಿ, ಕಲಾಯಿ, ಸಾಣೆ ಎಲ್ಲಾ ಬೇಕಿದ್ದರೆ ಹಾಕಿಸಿ ಸಿದ್ಧಗೊಳಿಸಲಾಗುತ್ತಿತ್ತು. ಹಸು, ಕರುಗಳಿಗೆ ಹಾಕಲು ವಿಶೇಷ ಹಾರಗಳನ್ನು ತಯಾರಿಸಲಾಗುತ್ತಿತ್ತು. ಅವುಗಳನ್ಮು ಹಣ್ಣಡಿಕೆ (ಗೋಟಡಿಕೆ) ,ಅಡಿಕೆಯ ಸಿಂಗಾರ, ವೀಳ್ಯದೆಲೆ ಮತ್ತು ಪಚ್ಚತೆನೆಗಳನ್ನು ಹಾಕಿ ವಿಶೇಷವಾದ ಪುಂಡಿದಾರದಲ್ಲಿ ಹಾರ ತಯಾರು ಮಾಡುತ್ತಿದ್ದರು. ಪುಂಡಿ ಮರದ ತೊಗಟೆಯಿಂದ ತೆಗೆಯಲಾದ ಈ ದಾರ, ಹಾಗೂ ಉಳಿದ ವಸ್ತುಗಳು ಹಸುಗಳು ತಿಂದರೂ ಏನೂ ಕೆಡುಕಾಗುತ್ತಿರಲಿಲ್ಲ. ಬದಲಿಗೆ ಪಚ್ಚತೆನೆ, ಸಿಂಗಾರದಂತವು ಔಷಧಿ ಮತ್ತು ಪೌಷ್ಟಿಕ ಆಹಾರವಾಗಿರುತ್ತಿದ್ದವು. ಸಂಜೆಯಿಂದ ಕೆಮ್ಮಣ್ಣು ಶೇಡಿಯ ಚಿತ್ತಾರ ಆರಂಭವಾಗಿ ರಾತ್ರಿಯ ಹೊತ್ತಿಗೆ ಮುಗಿಯುತ್ತಿತ್ತು. ರಾತ್ರಿ ದೊಡ್ಡ ಮೊಗೆಕಾಯಿ (ಮಂಗಳೂರು ಸೌತೆಕಾಯಿ ಜಾತಿಯ ತರಕಾರಿ), ಒಂದು ಬಲಿತ ಸೌತೆಕಾಯಿಯನ್ನು ಬಲಿ ಚಕ್ರವರ್ತಿ ಮತ್ತು ಆತನ ಪತ್ನಿಯ ರೂಪದಲ್ಲಿ ಅಲಂಕರಿಸುವ ಕೆಲಸ. ಆ ಕಪ್ಪು ಹಸಿರಿನ ಮೊಗೆಕಾಯಿಗೆ ಮಸಿಕೆಂಡದಲ್ಲಿ ದೊಡ್ಡ ಮೀಸೆ ಕಣ್ಣು, ಮೂಗು, ಬಾಯಿ ಬಿಡಿಸಿದರೆ, ಸೌತೆಕಾಯಿಗೆ ಕಣ್ಣು, ಮೂಗು, ಬಾಯಿ, ಕುಂಕುಮ ಬಿಡ...

ನವರಾತ್ರಿಯ ಎರಡು ಸ್ವಾರಸ್ಯಕರ ಘಟನೆಗಳು

ನವರಾತ್ರಿಯ ಎರಡು ಸ್ವಾರಸ್ಯಕರ ಘಟನೆಗಳು - ೧. ನನಗೆ ಗುಂಗುರು ಕೂದಲಾದ್ರೂ ಬಹಳ ದಪ್ಪ, ಉದ್ದನೆಯ ಕೂದಲಿತ್ತು. ಸೋಮವಾರ ಆಯಿ ತಲೆ ಸ್ನಾನ ಮಾಡುತ್ತಾಳೆಂದು ನಾನೂ ತಲೆಸ್ನಾನ ಮಾಡಿಸಿಕೊಳ್ಳುತ್ತಿದ್ದೆ. ಉದ್ದನೆಯ ಕೂದಲು ಬೆನ್ನು ಮುಗಿಸಿ ಮುಂದೆಯೂ ಮುಚ್ಚಿಕೊಳ್ಳುತ್ತಿತ್ತು. ಭಸ್ಮವೆಂದರೆ ನನಗೆ ಬಹಳ ಇಷ್ಟ. ಅದನ್ನು ಯಥೇಚ್ಛ ಹಚ್ಚಿಕೊಂಡು ದೊಡ್ಡ ಕುಂಕುಮ ಇಟ್ಟುಕೊಂಡು ಊರೆಲ್ಲ ಓಡಾಡುತ್ತಿದ್ದೆ. ಬಂತು ನೋಡು ಅಕ್ಕಮಹಾದೇವಿ ಎನ್ನುತ್ತಿದ್ದರು ಕೆಲಹಿರಿಯರು. ನನಗೆ ಏನೂ ಗೊತ್ತಾಗುತ್ತಿರಲಿಲ್ಲ ಮೊದಮೊದಲು. ಆಮೇಲೆ ಅವಳ ಜಾಡು ಹಿಡಿದು ಜಾಲಾಡಿಸಿದ ನಂತರ ಅದೊಂದು ಹೆಮ್ಮೆಯ ವಿಷಯವಾಯ್ತು. ಹೀಗಿರುವಾಗ ಅಪ್ಪನಿಗೆ ಮಗಳಿಗೆ ಕಾಲ್ಗೆಜ್ಜೆ ಮತ್ತು ಮೂಗಿಗೆ ರಿಂಗು ತೊಡಿಸುವ ಆಸೆ. ಪಾಪ ಎಷ್ಟೋ ಕಷ್ಟ ಪಟ್ಟು ಕೊಡಿಸಿಯೇಬಿಟ್ಟ. ಒಂದು ನವರಾತ್ರಿಯ ದಿನ, ಮಧ್ಯಾಹ್ನ ಊರಿನ ಕುಮಾರಿ ಹಸ್ತೋದಕ ಕಾರ್ಯಕ್ರಮ ಮುಗಿಸಿ ಮನೆಗೆ ಬಂದೆನೊ ಇಲ್ಲವೊ. ಆಯಿ ಬಯ್ದು ಒಂದೇ ಸಮನೆ ಮೊದಲು ಮುಖ ತೊಳಿ, ನಿಮ್ಮಪ್ಪನಿಗೆ ಬುದ್ದಿಲ್ಲ. ಮೂಗಿಗೆ ರಿಂಗು ಯಾಕೆ ಬೇಕಿತ್ತು ಎಂದು ತೆಗೆಸಿ ಆ ಕೂಡಲೇ ರಂಧ್ರ ಮುಚ್ಚಬಾರದೆಂದು ತುಳಸಿಕಡ್ಡಿ ಹಾಕಿದಳು. ಕೊನೆಗೆ ಗೊತ್ತಾದ ವಿಷಯವೆಂದರೆ ಆ ಕೂದಲು, ಅರಿಶಿಣ ಕುಂಕುಮ, ವಿಭೂತಿಯ ಜೊತೆಗೆ ಮೂಗಿನ ಥಳಥಳಿಸುವ ದೇವಿಗೆ ಹಾಕುವ ರಿಂಗು ಸೇರಿ ನಾನು ಸಾಕ್ಷಾತ್ ದೇವಿಯ ಹಾಗೆ ಕಾಣುತ್ತಿದ್ದೆನಂತೆ! ಬಹುಶ ಅವತ್ತೇ ನನಗೆ ದೇವರು ಯಾಕೆ ಕಣ್ಣಿಗೆ ಬೀಳೊಲ್ಲ ಎನ...

ಶರನ್ನವರಾತ್ರಿಯ ಸವಿನೆನಪುಗಳು

ಶರನ್ನವರಾತ್ರಿಯ ಸವಿನೆನಪುಗಳು ಪ್ರೀತಿಯ ಓದುಗರಿಗೂ, ಎಲ್ಲಾ ಸ್ನೇಹಿತರಿಗೂ ಶರನ್ನವರಾತ್ರಿಯ ಹಾರ್ದಿಕ ಶುಭಕಾಮನೆಗಳು. ಈಗ ಶರನ್ನವರಾತ್ರಿಯ ಹಬ್ಬಕ್ಕೆ ಬರೋಣ. ಶರನ್ನವರಾತ್ರಿ ಹಾಡು, ರಂಗೋಲಿ, ಹು ಕಟ್ಟುವುದು, ಕುಮಾರಿ ದಕ್ಷಿಣೆ ಡಬ್ಬಿ, ಅರಿಸಿಣ ಕುಂಕುಮ, ಡೇರೆ ಮತ್ತು ಗೆಂಟಿಗೆ (ಸ್ಪಟಿಕ) ಹೂವಿನ ನೆನಪುಗಳ ಸವಿ ಎರೆಯೇವು (ದೇವಿಯ ನೈವೇದ್ಯಕ್ಕೆ ಮಾಡುವ ವಿಶೇಷ ತಿಂಡಿ). ವರ್ಷವೂ ಅಜ್ಜನಮನೆಯಲ್ಲಿ ಹಗಲು ಮೂರು ನವರಾತ್ರಿ ನಡೆಯುತ್ತಿತ್ತು. ಊರಿನಲ್ಲಿ ಆಯಿಯ ಅಕ್ಕನ ಮನೆಯಲ್ಲಿ ಮತ್ತು ಹೆಗಡೆ ಮನೆಯಲ್ಲಿ ಒಂಭತ್ತು ದಿನಗಳ ರಾತ್ರಿ ಪೂಜೆ ಜರುಗುತ್ತಿತ್ತು. ಮತ್ತೊಂದು ಊರಿನಲ್ಲಿದ್ದ ಅಜ್ಜಿಯ ಮನೆಯಲ್ಲಿ ಒಂಭತ್ತು ದಿನಗಳಲ್ಲಿ ಒಂದು ದಿನ ಮುತ್ತೈದೆಯರ ಊಟ ನಡೆಯುತ್ತಿತ್ತು. ಎಲ್ಲಾ ಕಡೆ ದೇವಿಯ ಯಥಾಶಕ್ತಿ ಕಲ್ಪೋಕ್ತಪೂಜೆ ನಡೆಯುತ್ತಿತ್ತು. ಈ ಎಲ್ಲರ ಮನೆಯಲ್ಲೂ ಪುರೋಹಿತರ ಮಾರ್ಗದರ್ಶನ ಮತ್ತು ಮಂತ್ರದಲ್ಲೇ ಪೂಜೆ. (ಇದು ನನಗೆ ಮೊದಮೊದಲು ಅಷ್ಟು ಅರ್ಥವಾಗದಿದ್ದರೂ ನಂತರದ ದಿನಗಳಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಯಾಕೆ ಎನ್ನುವುದನ್ನು ಮುಂದೆ ಹೇಳುತ್ತೇನೆ) ಶಾಲೆಗೆ ರಜೆ ಬೇರೆ ಇರುತ್ತಿತ್ತು. ಮಜವೋ ಮಜ. ಈ ಹಬ್ಬಕ್ಕೆ ನೆಂಟರಿಷ್ಟರ ಮಕ್ಕಳೆಲ್ಲ ಸಿಗುತ್ತಿದ್ದುದರಿಂದ ನಮ್ಮನ್ನು ಹಿಡಿಯುವವರೇ ಇರುತ್ತಿರಲಿಲ್ಲ. ಆ ಕ್ಷಣಗಳನ್ನೆಲ್ಲ ಬಾಚಿ ಬದುಕುವ ತುರ್ತುಸ್ಥಿತಿ ಅದು. ಸಂಜೆಯಾಗುತ್ತಿದ್ದ ಹಾಗೆ ಎರಡೂ ಜಡೆಗೆ ಹೂ ಮುಡಿದು ಇರುವುದರಲ್ಲೇ ಹೊಸ ಬಟ್ಟ...

ಮರೆತುಹೋದ ಹಬ್ಬಗಳು

ಮರೆತುಹೋದ ಹಬ್ಬಗಳು ಹಾಗೆ ನೋಡಿದರೆ ಹಬ್ಬಗಳಲ್ಲಿ ರಾತ್ರಿಯ ಆಚರಣೆಗಳ ಸಂಭ್ರಮ "ನಾಗರ ಪಂಚಮಿ" ಯಿಂದಲೂ ಶುರುವಾಗುತ್ತಿತ್ತು. ನಾಗರಪಂಚಮಿಯಂದು ನಾಗರಬನದಲ್ಲೊ, ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲೊ, ಮನೆಯಲ್ಲೊ ಹೆಸರುಬೇಳೆ ಅಕ್ಕಿ ಸೇರಿಸಿ ನೀರಿನಲ್ಲಿ ಬೇಯಿಸಿ ಮಾಡಿದ ಚರುವು ಮತ್ತು ಆ ಸೀಸನ್ನಿನಲ್ಲಿ ಯಥೇಚ್ಛ ಸಿಗುತ್ತಿದ್ದ ಹಲಸಿನಬೇಳೆಯ ಹೋಳಿಗೆ, ಒಬ್ಬಟ್ಟು ಏನಾದರೂ ಒಂದು ನೈವೇದ್ಯ ಮಾಡಲಾಗುತ್ತಿತ್ತು. ಮನೆಯವರೊಂದಿಗೆ ಊಟ ಮಾಡಿದರೆ ಹಗಲು ಹಬ್ಬ ಮುಗಿದಂತೆ. ಸಂಜೆ ಮಾತ್ರ ಮದರಂಗಿ ಗಿಡಗಳಿಗೆ ಉಳಿಗಾಲವಿದ್ದಿಲ್ಲ.‌ಕೆಂಡ ಮದರಂಗಿ ಜಾತಿಯ ಸಸಿ ತಂದು ನೆಟ್ಟು ದೊಡ್ಡ ಮಾಡುವುದೇ ಹೆಮ್ಮೆಯ ವಿಷಯವಾಗಿತ್ತು. ಪೊದೆಯಂತಾದವರ ಮನೆಯಲ್ಲಿ "ಎಮ್ಮನೆಯಲ್ಲಿ ಮದರಂಗಿ ಬೇಕಾದಷ್ಟು ಇದ್ದು" ಎಂದು ಹೇಳುವ ಗತ್ತು ನೋಡಿದರೆ ಅಂದಾಜಾಗಬಹುದು. ಅವತ್ತಿನ ದಿನ ಮದರಂಗಿಯ ಬೆಲೆ! ಅಂತೂ ಇಂತೂ ಮದರಂಗಿ ಎಲೆಯನ್ನು ಮನೆಯ ಗಂಡಸರು, ಮಕ್ಕಳು ಊರೆಲ್ಲ ಅಲೆದು ತರುತ್ತಿದ್ದರು. ಹೆಂಗಸರು ಊಟವಾದ ಮೇಲೆ/ಮೊದಲು ಮದರಂಗಿ ಎಲೆಗೆ ಹುಳಿಕಂಚಿಕಾಯಿ/ನಿಂಬೆಹಣ್ಣು/ಚಹದ ಡಿಕಾಕ್ಷನ್ ಯಾವುದಾದರೂ ಒಂದು ಹಾಕಿ ಒರಳಿನಲ್ಲಿ ಅರೆದುಕೊಡುತ್ತಿದ್ದರು. ಊಟವಾದ ಮೇಲೆ ಮನೆಯಲ್ಲಿ ಈ ಕೆಲಸದಲ್ಲೇ ಪಳಗಿದ ಕೈಯಿಂದ ಮದರಂಗಿ ಲೇಪ ಸೇವೆ . ಎಲ್ಲಾ ಇಪ್ಪತ್ತು ಬೆರಳುಗಳಿಗೆ ಮದರಂಗಿ ಕಲಕ ತೊಡೆದು ಹಾಳವಾರ ಅಥವಾ ಬೇಸಾಳ (ಆಡುಸೋಗೆ) ಸೊಪ್ಪನ್ನು ಸುತ್ತಿ ಬಾಳೆನಾರಿನಿಂದ ಕಟ್ಟಲಾಗ...

ಗಣಪತಿ ಬಪ್ಫ ಮೊರೆಯಾ

ಗಣಪತಿ ಬಪ್ಫ ಮೊರೆಯಾ ಋಷಿ ಪಂಚಮಿ ದಿನ ಬೆಳಗಾಗುವುದೇ ತಡ. ಮಧ್ಯಾಹ್ನ ಮಾಮೂಲು ಪೂಜೆ. ಊಟವಾದ ನಂತರ ಹೆಣ್ಣು, ಗಂಡು ಭೇದವಿಲ್ಲದೆ ಹೊಸಬಟ್ಟೆ ಹಾಕಿಕೊಂಡು ತಯಾರಾಗಿದ್ದೇ ಆಗಿದ್ದು. ನನಗಂತೂ ಈಗ ಬಾಬ್ ಹೋಗಿ ಜಡೆಯಾಗಿತ್ತು. ಆ ಎರಡೂ ಜಡೆಗಳನ್ನು ಅಮ್ಮ ಎಷ್ಟು ಚೆನ್ನಾಗಿ ಬಾಚಿಕೊಟ್ಟರೂ ಕಡಿಮೆಯೆ. ಒಂದು ಕೂದಲು ಹರಡಬಾರದಿತ್ತು. ಗುಂಗುರು ಕೂದಲು ಹೀಗೆ ಕೂರಿಸಿದರೆ ಹಾಗೆ ಎದ್ದು ಹಾರಾಡುತ್ತಿತ್ತು. ನನ್ನೊಳಗಿನ ಸಂಭ್ರಮದಂತೆ ! ಅದಕ್ಕೆ ಡೇರೆ ಹೂವು ಇರಲೇಬೇಕು. ಒಂದು ದೊಡ್ಡದು ಇಲ್ಲ ಎರಡು ಚಿಕ್ಕ ಹೂಗಳನ್ನು ಕೊಯ್ದು ಅದನ್ನು ಸರಿಯಾಗಿ ಮುಡಿಸಿಕೊಡುವವರೆಗೂ ನೆಮ್ಮದಿ ಇಲ್ಲ. ಅರ್ಧಗಂಟೆಗೂ ಹೆಚ್ಚು ಕಾಲ ಆರತಿ ನಡೆಯುತ್ತಿತ್ತು. ಆ ಆರತಿಗೆ ಆರತಿತಟ್ಟೆ ಬರೆಯುವುದು, ಅಲಂಕರಿಸುವುದು ಬಹಳ ಸುಂದರ ಅನುಭವವಾಗಿತ್ತು. ಊರಿನ ಹೆಗಡೆ ಮನೆಯಲ್ಲೆಂತೂ ಆರತಿ ತಟ್ಟೆಯಲ್ಲಿ ಕಲಾಸರಸ್ವತಿಯೇ ಆವಿರ್ಭವಿಸಿದ್ದಾಳೇನೊ ಎನ್ನುವ ಹಾಗೆ ಚಿತ್ರಣಗಳಿರುತ್ತಿದ್ದವು. ಈ ಅವಧಿಯಲ್ಲಿ ನಾನೂ ಆರತಿತಟ್ಟೆ ಮಾಡುವುದನ್ನು ಕಲಿತೆ. ಮಧ್ಯಾಹ್ನ ನಮ್ಮಗಳ ಅಲಂಕಾರಕ್ಕೂ ಮುಂಚೆ ಆರತಿತಟ್ಟೆಗಳು ಸಿದ್ಧವಾಗಿರುತ್ತಿದ್ದವು. ಸಂಜೆ ಐದುವರೆಗೆಲ್ಲ ಊರವವರು ಬರುತ್ತಿದ್ದರು. ಬಂದ ಕೂಡಲೆ ನೈವೇದ್ಯ ಮಂಗಳಾರತಿ. ಜಾಗಟೆ ಬಾರಿಸುವುದರ ವೈವಿಧ್ಯ, ಪಟಾಕಿಗಳು, ಪಟಾಕಿಗಳನ್ನು ಹಚ್ಚುವ ವೈವಿಧ್ಯ, ಹೊಸಬಟ್ಟೆಗಳು, ಅಲಂಕಾರಗಳು, ಜನರು ಎಲ್ಲವೂ ವೈವಿಧ್ಯಮಯ. ನನಗಂತೂ ನೋಡಲು, ಕಲಿಯಲು, ಅನುಭವಿಸಲು ದೇವರ...

ರಾತ್ರಿಗಳ ಹಬ್ಬಗಳು

ರಾತ್ರಿಗಳ ಹಬ್ಬಗಳು ಸಂಜೆಗಳು ಸುಂದರವಾಗಿಯೂ ಇರುತ್ತವೆ. ಈ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ದೊಡ್ಡ ಭಾಗ್ಯವೆಂದರೆ ಸಾಲು ಸಾಲು ಹಬ್ಬಗಳ ಆಚರಣೆ. ಅದರಲ್ಲೂ ನಾನು ಅಜ್ಜನ ಮನೆಯಲ್ಲಿ ಬೆಳೆದ ಈ ವಾತಾವರಣ ಬದುಕಿಗೊಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಆಯಾಮ ನೀಡಿತು. ಈ ಆಚರಣೆಗಳು ಹಗಲು ಮತ್ತು ರಾತ್ರಿ (ಅಹೋರಾತ್ರಿ ಅಲ್ಲ) ಎರಡು ಕಾಲಗಳಲ್ಲಿಯೂ ನಡೆಯುತ್ತವೆ. ಮಧ್ಯರಾತ್ರಿ ಮಾಡುವ ಶ್ರೀ ಕೃಷ್ಣ ಜನ್ಮಾಷ್ಟಮಿ ನನಗೆ ಕೃಷ್ಣನನ್ನು ಪರಿಚಯಿಸಿತು. ಅದಕ್ಕೂ ಮೊದಲು ಶಾಲೆಯಲ್ಲಿ ನಡೆಯುತ್ತಿದ್ದ ನೃತ್ಯಗಳಲ್ಲಿ ಕೃಷ್ಣನಾಗಿ ನಿಂತುಕೊಂಡಿದ್ದಷ್ಟೆ. ಅವನ ಬಗ್ಗೆ ಯಾವ ಕುತೂಹಲ ಹುಟ್ಟುವ ವಯಸ್ಸೂ ಅದಾಗಿರಲಿಲ್ಲ. ಈಗ ಅಜ್ಜನಮನೆಯಲ್ಲಿ "ಪೂಜೆ" ಗೊಳ್ಳುವ ಕೃಷ್ಣ ಕುತೂಹಲ ಹುಟ್ಟಿಸಿದ. ಆದರೆ ನಿಜಕ್ಕೂ ಕೃಷ್ಣ ಹತ್ತಿರವಾಗಿದ್ದು ಹೈಸ್ಕೂಲಿಗೆ ಬಂದ ನಂತರ ಭಗವದ್ಗೀತೆಯ ಮೂಲಕ. ಇಂತಿಪ್ಪ ಕೃಷ್ಣನ ಜನ್ಮದಿನ "ಕೃಷ್ಣಾಷ್ಟಮಿ ಹಬ್ಬ " ಜೋರಾಗಿಯೇ ಇರುತ್ತಿತ್ತು. ಮಧ್ಯರಾತ್ರಿಯಲ್ಲಿ ಸಾಲಿಗ್ರಾಮಗಳ ಅಭಿಷೇಕ, ವಿಶೇಷವಾಗಿ ಹಲಸಿನ ಸೊಳೆ(ತೊಳೆ)ಯಿಂದ ಮಾಡಿದ ಉಪ್ಪು ಹಾಕದ ಉಂಡಲೆಕಾಳು, ಬೆಲ್ಲಹಾಕಿದ ಸಿಹಿ ಉಂಡಲೆಕಾಳು ಹೀಗೆ ವಿವಿಧ ಬಗೆಯ ವಿಶೇಷ ಕಜ್ಜಾಯಗಳು ನೈವೇದ್ಯಕ್ಕಿರಬೇಕಾಗಿತ್ತು. ಸಾಮಾನ್ಯವಾಗಿ ಅವರವರ ಮನೆಯಲ್ಲಿ ಹಿರಿಯರು ಹೇಳಿಕೊಟ್ಟ ವಿಧಾನವನ್ನು ಕಿರಿಯರು ಶ್ರದ್ಧೆಯಿಂದ ಅನುಸರಿಸುತ್ತಿದ್ದರು. ನಾನು ರಾತ್ರಿ ನಿದ್ದೆ ಎಳೆಯುತ್ತಿದ್ದರೂ ಮೊ...

ಕತ್ತಲೆಯ ಮತ್ತೊಂದು ಮುಖ

  ಕತ್ತಲೆಯ ಮತ್ತೊಂದು ಮುಖ ಬದುಕು ಸಮಯಾತೀತ ಎನ್ನುವ ಪಾಠ ಕಲಿತು ಮತ್ತೆ ಅಜ್ಜಿಯ ಮನೆ ಕಡೆ ಬಂದಾಗ ಸಂಜೆಗಳ ಆಟ, ಟಿವಿಯ ಜೊತೆಗೆ ಇನ್ನೊಂದು ಕೆಲಸವಿತ್ತು. ಹಾಲು ಕೊಡುವುದು. ಮನೆಯಲ್ಲಿ ಕರೆಯುವ ಹಸುವಿದ್ದಾಗ ಒಂದೊ ಎರಡೊ ಲೀಟರ್ ಹಾಲನ್ನು ಡೈರಿಗೆ ಕೊಡುತ್ತಿದ್ದರು. ಡೈರಿ ಸುಮಾರು 1 ಕಿ.ಮೀ ದೂರ. ಹಿಂದಿನ ಸಂಚಿಕೆಯಲ್ಲಿ ವಿವರಿಸಿದ ಕೆಳಗಿನ ಕೇರಿಯ ವಿರುದ್ಧ ದಿಕ್ಕು. ಇದು ಶಿರಸಿ, ಸಿದ್ಧಾಪುರ ತಾಲೂಕನ್ನು ಸೇರಿಸುವ ರಸ್ತೆಗೆ ತಾಗಿತ್ತು. ಈ ಡೈರಿಗೆ ಹಾಲು ಕೊಡುವಾಗ ಸಂಜೆ 6 ಗಂಟೆಯ ಮೇಲಾಗುತ್ತಿತ್ತು. ಕತ್ತಲೆಯಲ್ಲಿ ರಸ್ತೆಯ ವಾಹನಗಳ ಬೆಳಕಿನಲ್ಲಿ ನಡೆದು ಹಾಲು ಕೊಟ್ಟು ಬರುತ್ತಿದ್ದೆ.‌ಮಧ್ಯ ಕೆಲವೊಮ್ಮೆ ಬ್ಯಾಟರಿ ಜೊತೆಯಾಗಿತ್ತು. ಅಮ್ಮ ಹೊಡೆದು ಹೆದರಿಸಿದ್ದ ಕತ್ತಲೆಯ ಭಯ ಹೋಗಿದ್ದು ಇದೂ ಒಂದು ಕಾರಣಕ್ಕೆ. ವಾಹನಗಳನ್ನು ತಪ್ಪಿಸಿಕೊಂಡು ರಸ್ತೆ ದಾಡುವುದನ್ನು ಎರಡೂ ಹಳ್ಳಿ ಪೇಟೆಗಳು 6-7 ವರ್ಷಗಳಿಗೆಲ್ಲ ಕಲಿಸಿದ್ದವು. ಡೈರಿಗೆ ಹೋಗುವುದೂ ಹೊಸತಾಗಿರಲಿಲ್ಲ. ನನ್ನನ್ನು ಸ್ವತಂತ್ರ ಮಾಡಬೇಕೆಂಬ ಅಮ್ಮ, ಅಪ್ಪ ಹಿಂದಿನ ಊರಿನಲ್ಲೇ ಡೈರಿಯಿಂದ ಹಾಲು, ಪೇಪರು ತರಿಸುತ್ತಿದ್ದರು. ಅಪ್ಪ, ಅಮ್ಮನ ಮಾತೆಂದರೆ ವೇದವಾಕ್ಯವಾಗಿದ್ದ ನನಗೆ ಆ ಕೆಲಸ ಬೇಸರವೆನಿಸಿರಲಿಲ್ಲ. ಈಗ ಕತ್ತಲೂ ನನಗೆ ಬೇಸರವನ್ನಾಗಲಿ, ಹೆದರಿಕೆಯನ್ನಾಗಲೀ ಮೂಡಿಸಲಿಲ್ಲ. ಅಥವಾ ನನ್ನ ಸಹಪಾಠಿಗಳೆಲ್ಲ ಆರಾಮಾಗಿದ್ದಾರೆ ನಾನು ಮಾತ್ರ ಇಷ್ಟೊಂದು ಕೆಲಸ ಮಾಡಬೇಕಲ್ಲ ಎಂಬ ಯೋಚನೆ ಬರುತ್ತ...

ಆ ಒಂದು ಹೊಡೆತ ಬದುಕಿಗೆ ಸಾಕು

ಆ ಒಂದು ಹೊಡೆತ ಬದುಕಿಗೆ ಸಾಕು ನನಗೆ ಕತ್ತಲು ಹೊಸತಾಗಿರಲಿಲ್ಲ. ಒಂದು ಅಥವಾ ಎರಡನೇ ತರಗತಿ ಇರಬೇಕು. ನನಗೊಂದು ವಿಚಿತ್ರ ಮೋಹ ಬಂದಿತ್ತು. ಪೇಟೆಯಂತಹ ಹಳ್ಳಿಯಲ್ಲಿ ನನ್ನ ಅಪ್ಪನ ಅಂಗಡಿ ಇತ್ತು. ನಾವು ಅಂಗಡಿಗೆ ತಾಗಿಯೇ ಇದ್ದ ನಮ್ಮ ಮನೆಯಲ್ಲಿದ್ದೆವು. ಅಂಗಡಿಯೆದುರು ಎರಡು ತಾಲೂಕುಗಳನ್ನು ಸೇರಿಸುವ ರಸ್ತೆ. ವಾಹನಗಳ ಓಡಾಟ ಬಹಳ. ನಾನು ಸಂಜೆಯಾಗಲಿಕ್ಕಿಲ್ಲ, ರಸ್ತೆಯ ಅಂಚಿಗೆ ಹೋಗಿ ನಿಂತು ಬಿಡುತ್ತಿದ್ದೆ. ಒಂದೇ ಸಮನೆ ಬರುತ್ತಿದ್ದ ವಾಹನಗಳನ್ನು ನೋಡುವುದೇ ಚೆಂದ. ಕತ್ತಲೆಯ ಆ ದಾರಿಯಲ್ಲಿ ವಾಹನಗಳ ಬೆಳಕು ಅಪ್ಯಾಯಮಾನವಾಗಿರುತ್ತದೆ.‌ ಈ ಕತ್ತಲು, ಬೆಳಕಿನಾಟ ನನಗೆ ಸೊಗಸಾಗಿ ತೋರಿದ್ದರಲ್ಲಿ ಆಶ್ಚರ್ಯವಿಲ್ಲ. ನಿಜವಾದ ಸಮಸ್ಯೆ ಅಮ್ಮನಿಗೆ ಕಾಣಿಸುತ್ತಿತ್ತು. ಎಲ್ಲಾ ಅಮ್ಮಂದಿರ ಹಾಗೆ ನನ್ನಮ್ಮನಿಗೂ ಒಬ್ಬಳೇ (ಅಲ್ಲಿವರೆಗೆ) ಮಗಳು. ಹೆತ್ತವರಿಗೆ ಹೆಗ್ಗಣ ಮುದ್ದಾದ ಹಾಗೆ ಅಮ್ಮನಿಗೂ ನಾನು ಸುಂದರಿ. ರಸ್ತೆಯ ಪಕ್ಕ ಕುಳಿತ ನನ್ನನ್ನು ಯಾರಾದರೂ ಎತ್ತಿಕೊಂಡು ಗಾಡಿಯಲ್ಲಿ ತುಂಬಿಕೊಂಡು ಹೋಗಿ ಬಿಟ್ಟರೆ! ಭಯ, ಆತಂಕಗಳಿಂದ ಕಂಗಾಲಾದ ಅಮ್ಮ ದಿನ "ಬೇಡ, ಮಗಳೆ ಹೋಗಬೇಡ, ಹಾಗೆ ರಸ್ತೆ ಬದಿಯಲ್ಲಿ ನಿಲ್ಲಬೇಡ. ಯಾರಾದರೂ ಎತ್ಕೊಂಡು ಹೋಗ್ಬಹ್ದು" ಎಂದು ಹೇಳುತ್ತಲೇ ಇದ್ದಳು. ಹದಿನೈದು ದಿನ ಆಗಿರಬಹುದು. ಅವತ್ತೂ ಹಾಗೆಯೇ ರಸ್ತೆ ಬದಿಯಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ಗಾಡಿಗಳನ್ನು ನೋಡ್ತಾ ಇದ್ದೆ. ಯಾಕೊ ಅಮ್ಮ ಬಂದ ಹಾಗಾಯ್ತು. ಭಯವಾಯ್ತು. ಅಂಗ...

ಭ್ರಮೆ ಮತ್ತು ವಾಸ್ತವ

ಭ್ರಮೆ ಮತ್ತು ವಾಸ್ತವ ಕತ್ತಲು ಮತ್ತು ಬೆಳಕು ಒಂದಕ್ಕೊಂದು ಬೆರೆತು ಬದುಕುವಂತವು. ಎರಡಕ್ಕೂ ಅಸ್ತಿತ್ವ ಇರುವುದು ಇನ್ನೊಂದರ ಅಸ್ತಿತ್ವದ ಮೇಲೆ. ಇದೊಂತರ ಒಳ್ಳೆಯದು, ಕೆಟ್ಟದು ಇದ್ದ ಹಾಗೆ. ನನಗೆ ಕತ್ತಲು ಕತ್ತಲು ಎಂದೇ ಅನಿಸುವುದಿಲ್ಲ. ಬದಲಿಗೆ ಬೆಳಕು ಬರುವ ಮುನ್ಸೂಚನೆ ಅನಿಸುತ್ತದೆ. ನಿಚ್ಛಳ ಬೆಳಕಿನಲ್ಲಿ ಆತಂಕಗೊಳ್ಳುತ್ತೇನೆ. ಬೇಡವೆಂದರೂ ಬಂದೇ ಬರುವ ಕತ್ತಲ ಬಗ್ಗೆ. ನಾನು ನನ್ನ ಒಂಭತ್ತೂವರೆ ವರ್ಷದಿಂದ ೧೨ವರೆ ವರ್ಷಗಳ ವರೆಗೆ ಅಜ್ಜಿ ಮನೆಯಲ್ಲಿ ಬೆಳೆದೆ. ಆ ಸಮಯದಲ್ಲಿ ರಾತ್ರಿ ಚಿತ್ರಮಂಜರಿಯೊ ಹಾಳು ಮೂಳು ಆಟವೊ, ಊರಲ್ಲೆಲ್ಲ ಊಟ ಮಾಡಿ ಮಲಗಲು ಹೊರಟರೆಂದೊ ನಾನು ಮನೆಗೆ ಹೊರಡುತ್ತಿದ್ದೆ. ಹೇಳಿ ಕೇಳುವವರು ಯಾರೂ ಇರಲಿಲ್ಲ ಎಂದಲ್ಲ. ಬೈದರೆ ಜಗ್ಗುವವಳಲ್ಲ, ಹೊಡೆದರೆ ಬಗ್ಗುವವಳಲ್ಲ ಎಂದು ಎಲ್ಲಾ ಸುಸ್ತಾಗಿ ಏನಾರ ಮಾಡ್ಕಳ್ಳಿ ಎಂದು ಬಿಟ್ಟ ಗಾಡಿ. ಆಯಿ ಎಂಬ ಅಡಗಿಸುವ ಸೆರಗು ಇರುವವರೆಗೂ ಅವಳ ಹಿಂದೆ , ನಂತರ ದೊಡ್ಡತ್ತೆ ಆಮೇಲೆ ನಾನೆಂಬ ನಾನೇ ಇದ್ದರಲ್ಲ. ಬೈದರೆ ಸಣ್ಣದಾಗಿ ಅವರತ್ರ ಹೇಳಿ ಹೋಗಿದ್ದೆ ಎಂದರೆ ಮುಗಿಯಿತು. ರಾತ್ರಿ 9 ಗಂಟೆಯ ಮೇಲೆ ಕತ್ತಲಲ್ಲಿ ಕೆಳಗಿನ ಕೇರಿಯಿಂದ ಮೇಲಿನ ಕೇರಿಗೆ ಅರ್ಧ ಕಿ.ಮೀ ಹಾದಿ. ಸಣ್ಣ ಏರು ಹತ್ತಿ ಬರಬೇಕಿತ್ತು. ಕತ್ತಲೆಯ ಹಾದಿ. ಒಂದು ಕಡೆ ದೊಡ್ಡ ಕಾನಿಗೆ ಹೊಂದಿಕೊಂಡಿರುವ ಸಣ್ಣ ಕುರುಚಲು ಕಾಡು. ರಸ್ತೆಯ ಬಲಕ್ಕೆ ಸಣ್ಣ ಇಳಿಜಾರು.ಹುಲ್ಲ ಬಯಲು , ಬಯಲಿನ ಕೆಳಗೆ ಅಡಿಕೆ ಮರಗಳ ದಟ್ಟವಾದ ತೋಟ. ಕಾನಿ...