ಅನನ್ಯ ದೀಪಾವಳಿ
ಅನನ್ಯ ದೀಪಾವಳಿ ನಮ್ಮ ಕಡೆ ದೀಪಾವಳಿಗಿಂತ ದೊಡ್ಡ ಹಬ್ಬ ಬೇರೊಂದಿಲ್ಲ. ಕತ್ತಲ ರಾತ್ರಿ ನರಕಚತುರ್ದಶಿಯ ಮುಂಚಿನ ದಿನ. ಅವತ್ತು ಬೆಳಗಿನಂತೆ ಸಂಭ್ರಮ. ಮನೆಯ ಹೊಸ್ತಿಲಿನಿಂದ ಹಿತ್ತಲವರೆಗೆ ಕೆಮ್ಮಣ್ಣು ಹಚ್ಚಿ ಶೇಡಿ ಬಿಡಿಸುವ ಸಂಭ್ರಮ. ಆಯುಧ ಪೂಜೆಗೆ ಕೃಷಿ ಹಾಗೂ ಪಾಕಶಾಲೆಯ ಹತ್ಯಾರಗಳನ್ನು ಸ್ವಚ್ಛ ಮಾಡುವುದಿದ್ದರೆ ಮಾಡಿ, ಕಲಾಯಿ, ಸಾಣೆ ಎಲ್ಲಾ ಬೇಕಿದ್ದರೆ ಹಾಕಿಸಿ ಸಿದ್ಧಗೊಳಿಸಲಾಗುತ್ತಿತ್ತು. ಹಸು, ಕರುಗಳಿಗೆ ಹಾಕಲು ವಿಶೇಷ ಹಾರಗಳನ್ನು ತಯಾರಿಸಲಾಗುತ್ತಿತ್ತು. ಅವುಗಳನ್ಮು ಹಣ್ಣಡಿಕೆ (ಗೋಟಡಿಕೆ) ,ಅಡಿಕೆಯ ಸಿಂಗಾರ, ವೀಳ್ಯದೆಲೆ ಮತ್ತು ಪಚ್ಚತೆನೆಗಳನ್ನು ಹಾಕಿ ವಿಶೇಷವಾದ ಪುಂಡಿದಾರದಲ್ಲಿ ಹಾರ ತಯಾರು ಮಾಡುತ್ತಿದ್ದರು. ಪುಂಡಿ ಮರದ ತೊಗಟೆಯಿಂದ ತೆಗೆಯಲಾದ ಈ ದಾರ, ಹಾಗೂ ಉಳಿದ ವಸ್ತುಗಳು ಹಸುಗಳು ತಿಂದರೂ ಏನೂ ಕೆಡುಕಾಗುತ್ತಿರಲಿಲ್ಲ. ಬದಲಿಗೆ ಪಚ್ಚತೆನೆ, ಸಿಂಗಾರದಂತವು ಔಷಧಿ ಮತ್ತು ಪೌಷ್ಟಿಕ ಆಹಾರವಾಗಿರುತ್ತಿದ್ದವು. ಸಂಜೆಯಿಂದ ಕೆಮ್ಮಣ್ಣು ಶೇಡಿಯ ಚಿತ್ತಾರ ಆರಂಭವಾಗಿ ರಾತ್ರಿಯ ಹೊತ್ತಿಗೆ ಮುಗಿಯುತ್ತಿತ್ತು. ರಾತ್ರಿ ದೊಡ್ಡ ಮೊಗೆಕಾಯಿ (ಮಂಗಳೂರು ಸೌತೆಕಾಯಿ ಜಾತಿಯ ತರಕಾರಿ), ಒಂದು ಬಲಿತ ಸೌತೆಕಾಯಿಯನ್ನು ಬಲಿ ಚಕ್ರವರ್ತಿ ಮತ್ತು ಆತನ ಪತ್ನಿಯ ರೂಪದಲ್ಲಿ ಅಲಂಕರಿಸುವ ಕೆಲಸ. ಆ ಕಪ್ಪು ಹಸಿರಿನ ಮೊಗೆಕಾಯಿಗೆ ಮಸಿಕೆಂಡದಲ್ಲಿ ದೊಡ್ಡ ಮೀಸೆ ಕಣ್ಣು, ಮೂಗು, ಬಾಯಿ ಬಿಡಿಸಿದರೆ, ಸೌತೆಕಾಯಿಗೆ ಕಣ್ಣು, ಮೂಗು, ಬಾಯಿ, ಕುಂಕುಮ ಬಿಡಿಸಲಾ